news18-kannada Updated:December 16, 2020, 1:03 PM IST
ಉದ್ದವ್ ಠಾಕ್ರೆ.
ಮುಂಬೈ (ಡಿಸೆಂಬರ್ 16); ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಬಹುತೇಕ ವರ್ಷವಾಗಿದೆ. ಈ ನಡುವೆ ದಶಕಗಳಿಂದ ಬಲಪಂಥೀಯ ಪಕ್ಷವಾಗಿಯೇ ಗುರುತಿಸಿಕೊಂಡಿದ್ದ ಶಿವಸೇನೆ ಜಾತ್ಯಾತೀತ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ನಾಯಕರು ನೇರಾ ನೇರ, " ಬಲಪಂಥೀಯ ನಾಯಕರಾಗಿದ್ದ ಉದ್ದವ್ ಠಾಕ್ರೆ ಈಗ ಜಾತ್ಯಾತೀತರಾಗಿದ್ದಾರೆ" ಎಂದು ಕುಟುಕಿತ್ತು. ರಾಜ್ಯಪಾಲರು ಸಹ ಇಂತಹದ್ದೇ ಹೇಳಿಕೆ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದರು. ಆದರೆ, ಇಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ನಾನು ಇನ್ನೂ ಹಿಂದುತ್ವವನ್ನು ಬಿಟ್ಟುಕೊಟ್ಟಿಲ್ಲ" ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಪ್ರಾಚೀನ ದೇವಾಲಯಗಳ ಸಂರಕ್ಷಣೆಗಾಗಿ ನಿಧಿಯನ್ನು ಘೋಷಿಸಿದರು. ಅಲ್ಲದೆ, ವಿವಾದಾತ್ಮಕ ಮರಾಠ ಮೀಸಲಾತಿ ಸೇರಿದಂತೆ ಹಲವಾರು ವಿಷಯಗಳನ್ನು ಮಂಡಿಸಿದ್ದರು. ಈ ವೇಳೆ ಮಾತನಾಡಿರುವ ಅವರು, "ಸರ್ಕಾರದ ಈ ನಡೆಯ ಮೂಲಕ ನಾವು ಇನ್ನೂ ಹಿಂದುತ್ವವನ್ನು ಬಿಟ್ಟುಕೊಟ್ಟಿಲ್ಲ ಎಂಬುದು ವಿರೋಧ ಪಕ್ಷಗಳಿಗೆ ಅರ್ಥವಾಗುವಂತೆ ಮಾಡುತ್ತದೆ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : Farmers Protest; ರೈತರ ಪ್ರತಿಭಟನೆಯಲ್ಲಿ ಮೃತಪಟವರ ಗೌರವಾರ್ಥ ಡಿ. 20ರಂದು ಶೋಕ ದಿನ ಆಚರಣೆ!
ಇದೇ ವೇಳೆ "ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾಚೀನ ದೇವಾಲಯಗಳ ಪುನಃಸ್ಥಾಪನೆ ಮತ್ತು ಸಂರಕ್ಷಣೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಯೋಜನೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು" ಎಂದಿರುವ ಉದ್ಧವ್ ಠಾಕ್ರೆ ದೇವಾಲಯಗಳ ಸಂರಕ್ಷಣೆಗಾಗಿ ಪ್ರತಿಪಕ್ಷಗಳ ಸಹಕಾರವೈ ಅಗತ್ಯ ಎಂದಿದ್ದಾರೆ.
ಕೊರೋನಾ ಕಾರಣಕ್ಕಾಗಿ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ಅಕ್ಟೋಬರ್ನಲ್ಲಿ ಉದ್ದವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಡುವೆ ತೀವ್ರ ಆರೋಪ ಪ್ರತ್ಯಾರೋಪಗಳು ನಡೆದಿತ್ತು. ಈ ಸಂದರ್ಭ ರಾಜ್ಯಪಾಲರು ಉದ್ದವ್ ಠಾಕ್ರೆ ಅವರನ್ನು "ನೀವು ಜಾತ್ಯತೀತರಾಗಿದ್ದೀರ?"ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಇದಕ್ಕೆ ಉದ್ಧವ್ ಠಾಕ್ರೆ, "ನನಗೆ ಯಾರಿಂದಲೂ ಹಿಂದುತ್ವ ಪ್ರಮಾಣಪತ್ರದ ಅಗತ್ಯವಿಲ್ಲ" ಎಂದು ಪ್ರತ್ಯುತ್ತರ ನೀಡಿದ್ದರು.
Published by:
MAshok Kumar
First published:
December 16, 2020, 1:03 PM IST