ಭಾರತ-ಇಂಗ್ಲೆಂಡ್ ನಡುವಣ ಟಿ20 ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿರುವುದರಿಂದ ಇಂಗ್ಲೆಂಡ್ ವಿರುದ್ಧದ ಈ ಸರಣಿ ಮಹತ್ವ ಪಡೆದುಕೊಂಡಿದೆ. ಇತ್ತ 19 ಸದಸ್ಯರನ್ನು ಒಳಗೊಂಡಿರುವ ಬಲಿಷ್ಠ ಪಡೆಯನ್ನೇ ಆಯ್ಕೆ ಸಮಿತಿ ಪ್ರಕಟಿಸಿದ್ದು, ಹೀಗಾಗಿ ಪ್ಲೇಯಿಂಗ್ ಇಲೆವೆನ್ಗೆ ಯಾರನ್ನು ಆಯ್ಕೆ ಮಾಡುವುದು ಎಂಬ ಸಂದಿಗ್ಥತೆ ತಲೆದೂರಿದೆ.
ನಾಯಕನಾಗಿ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರೆ, ಉಪನಾಯಕನಾಗಿ ರೋಹಿತ್ ಶರ್ಮಾ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಹಿಟ್ಮ್ಯಾನ್ ಜೊತೆ ಯಾರನ್ನು ಆರಂಭಿಕರಾಗಿ ಕಣಕ್ಕಿಳಿಸುವುದು ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಶುರುವಾಗಿದೆ. ಏಕೆಂದರೆ ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ಮರಳಿದ್ದಾರೆ. ಈ ಹಿಂದಿನಂತೆ ರೋಹಿತ್ ಶರ್ಮಾ ಜೊತೆ ಶಿಖರ್ ಆರಂಭಿಕನಾಗಿ ಅವಕಾಶ ಪಡೆದರೆ, ಫಾರ್ಮ್ನಲ್ಲಿರುವ ಕೆಎಲ್ ರಾಹುಲ್ಗೆ ಅವಕಾಶ ಕೈತಪ್ಪುವ ಸಾಧ್ಯತೆಯಿದೆ.
ಏಕೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಹುಲ್ಗೆ ಪ್ರಬಲ ಸ್ಪರ್ಧಿಯಾಗಿ ರಿಷಭ್ ಪಂತ್ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಪಂತ್, ಟಿ20 ಆಡುವ ಬಳಗದಲ್ಲೂ ಚಾನ್ಸ್ ಪಡೆಯುವ ಸಾಧ್ಯತೆ ಹೆಚ್ಚಿದೆ. ಇತ್ತ ಶಿಖರ್-ಪಂತ್ ಸ್ಥಾನ ಪಡೆದರೆ ಪ್ಲೇಯಿಂಗ್ ಇಲೆವೆನ್ನಿಂದ ರಾಹುಲ್ ಹೊರಗುಳಿಯಬೇಕಾಗಿ ಬರಬಹುದು.
ಆರಂಭಿಕರಾಗಿ ರೋಹಿತ್ ಶರ್ಮಾ- ಶಿಖರ್ ಧವನ್ ಕಣಕ್ಕಿಳಿದರೆ, ನಾಯಕ ಕೊಹ್ಲಿ ಸ್ವತಃ 3 ನೇ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಇದ್ದಾರೆ. ಆದರೆ ಇಲ್ಲಿ ಅಯ್ಯರ್ಗೆ ಪ್ರಬಲ ಸ್ಫರ್ಧಿಯಾಗಿ ಟೀಮ್ ಇಂಡಿಯಾ ಸೂರ್ಯಕುಮಾರ್ ಯಾದವ್ ಎಂಟ್ರಿ ಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟ್ಸ್ಮನ್ ಎಂದು ಗುರುತಿಸಿಕೊಂಡಿರುವ ಸೂರ್ಯಕುಮಾರ್ ವಿಜಯ್ ಹಝಾರೆ ಟೂರ್ನಿಯಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೀಗಾಗಿ 4ನೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ರಲ್ಲಿ ಯಾರನ್ನು ಕಣಕ್ಕಿಳಿಸುವುದು ಎಂಬ ಚಿಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಿದೆ.
ಇನ್ನು ಐದನೇ ಸ್ಥಾನದಲ್ಲಿ ಗೇಮ್ ಚೇಂಜರ್ ಆಗಿ ಹಾರ್ದಿಕ್ ಪಾಂಡ್ಯ ಸ್ಥಾನ ಗಟ್ಟಿಯಾಗಿದೆ. ಹಾಗೆಯೇ 6ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಇತ್ತ ಮತ್ತೋರ್ವ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಕೂಡ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಕೆಎಲ್ ರಾಹುಲ್-ಪಂತ್-ಇಶಾನ್ ಕಿಶನ್ ನಡುವೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ಪೈಪೋಟಿ ಏರ್ಪಡಲಿರುವುದಂತು ಸತ್ಯ.
ಹಾಗೆಯೇ ಸ್ಪಿನ್ನರ್ಗಳ ವಿಭಾಗದಲ್ಲಿ ತಂಡದಲ್ಲಿರುವ ಆಟಗಾರರೆಂದರೆ ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್ ಹಾಗೂ ಅಕ್ಷರ್ ಪಟೇಲ್. ಇದರಲ್ಲಿ ಸುಂದರ್ ಹಾಗೂ ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದಾರೆ. ಅತ್ತ ಚಹಲ್ ಟಿ20 ಯ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಅತ್ತ ಯುವ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ಈ ನಾಲ್ವರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಸವಾಲಾಗಿ ಪರಿಣಮಿಸಲಿದೆ.
ಅದೇ ರೀತಿ, ವೇಗ ವಿಭಾಗದಲ್ಲಿ, ಭುವನೇಶ್ವರ್ ಕುಮಾರ್ ದೀರ್ಘಾವಧಿಯ ಬಳಿಕ ತಂಡಕ್ಕೆ ಹಿಂತಿರುಗಿದ್ದಾರೆ. ಇನ್ನು ತಂಡದಲ್ಲಿರುವ ಇತರೆ ಬೌಲರುಗಳೆಂದರೆಟಿ.ನಟರಾಜನ್, ದೀಪಕ್ ಚಹರ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್. ಈ ಐವರಲ್ಲಿ ಮೂವರು ಅಥವಾ ಇಬ್ಬರನ್ನು ಪ್ಲೇಯಿಂಗ್ ಇಲೆವೆನ್ಗೆ ಆಯ್ಕೆ ಮಾಡಬೇಕಿದೆ. ಈಗಾಗಲೇ ಟಿ. ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನು ಸೈನಿ-ಚಹರ್ ಚುಟುಕು ಕ್ರಿಕೆಟ್ನಲ್ಲಿ ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಅನುಭವಕ್ಕೆ ಮಣೆ ಹಾಕುವ ಮೂಲಕ ಭುವಿ ಬೌಲಿಂಗ್ ವಿಭಾಗವನ್ನು ಮುನ್ನಡೆಸುವುದು ಬಹುತೇಕ ಖಚಿತ. ಹೀಗಾಗಿ ಟಿ.ನಟರಾಜನ್, ದೀಪಕ್ ಚಹರ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್, ಇವರಲ್ಲಿ ಪ್ಲೇಯಿಂಗ್ ಇಲೆವೆನ್ ಅವಕಾಶ ಯಾರಿಗೆ ದೊರೆಯಲಿದೆ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಸದ್ಯ ಗಾಯದ ಕಾರಣ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ವೈಯುಕ್ತಿಕ ಕಾರಣಗಳಿಂದಾಗಿ ಜಸ್ಪ್ರೀತ್ ಬುಮ್ರಾ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಈ ಮೂವರು ಆಟಗಾರರ ಪುನರಾಗಮನವಾದರೆ, ತಂಡದ ಆಯ್ಕೆ ದೊಡ್ಡ ಆಯ್ಕೆ ತಲೆನೋವಾಗಿ ಪರಿಣಮಿಸುತ್ತದೆ ಎಂಬುದರಲ್ಲಿ ಯಾವುದೇ ಡೌಟ್ ಇಲ್ಲ.
ಇಂಡಿಯಾ ಟಿ20 ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್.ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್),ಯಜುವೇಂದ್ರ ಚಹಾಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಠಿಯಾ, ಟಿ.ನಟರಾಜನ್, ಭುವನೇಶ್ವರ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.