news18-kannada Updated:April 13, 2021, 6:59 PM IST
ಆರ್ಕೆಸ್ಟ್ರಾ ಮೈಸೂರು
ಯುಗಾದಿ ಹಬ್ಬವಾದ ಇಂದು ಚಂದನವನದಲ್ಲಿ ಮಾದಪ್ಪನ ಪದವೇ ಕೇಳಿ ಬರುತ್ತಿದೆ. ನಿನ್ನ ಪೂಜೆಗೆ ಬಂದೇ ಮಾದೇಶ್ವರ ಹಾಡಿನಿಂದ ಪ್ರಖ್ಯಾತಿ ಗಳಿಸಿದ್ದ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಈಗ ಮತ್ತೆ ಮಾದಪ್ಪ ಉಘೇ ಉಘೇ ಅಂತಿದ್ದಾರೆ. ಕನ್ನಡದ ಆರ್ಕೆಸ್ಟ್ರಾ ಮೈಸೂರು ಸಿನಿಮಾದ ಮಾದಪ್ಪ ಹಾಡನ್ನು ಹಬ್ಬದ ದಿನವಾದ ಇಂದು ಯೂಟ್ಯೂಬ್ನಲ್ಲಿ ರಿಲೀಸ್ ಮಾಡಿದ್ದಾರೆ. ಕೇವಲ 10 ಗಂಟೆಗಳ ಅವಧಿಯಲ್ಲೇ ಮಾದಪ್ಪನ ಹಾಡನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುವ ಮೂಲಕ ಟ್ರೆಡಿಂಗ್ನಲ್ಲಿ 2ನೇ ಸ್ಥಾನಕ್ಕೇರಿದೆ.
ವಿಶೇಷವೆಂದರೆ ಹಾಡಿನ ಸಾಹಿತ್ಯವನ್ನು ಕನ್ನಡ ಪ್ರತಿಭಾನ್ವಿತ ನಟ ಡಾಲಿ ಧನಂಜಯ್ ರಚಿಸಿದ್ದಾರೆ. ಈ ಹಾಡಿನ ಮೂಲಕ ಗೀತ ರಚನೆಕಾರರಾಗಿರುವ ಧನಂಜಯ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಈ ಹಾಡಿಗೆ ಗಾಯಕ ನವೀನ್ ಸಜ್ಜು ದನಿಯಾಗಿದ್ದಾರೆ. ರಘು ದೀಕ್ಷಿತ್-ನವೀನ್ ಸಜ್ಜು-ಡಾಲಿ ಧನಂಜಯ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಮಾದಪ್ಪನ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾದಪ್ಪನ ಹಾಡಿನ ಬಗ್ಗೆ ನಟ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಜೀವದಲ್ಲಿ ಸಂಗೀತವಿದೆ. ಪ್ರತಿ ಉಸಿರಿನಲ್ಲಿ ರಾಗವಿದೆ. ಪ್ರತಿ ಹೆಜ್ಜೆಯಲ್ಲಿ ತಾಳವಿದೆ. ಈ ಇಡೀ ಜಗತ್ತು ಆ ಲಯಕರ್ತ ಮಾದಪ್ಪನ ಹಾಡಲ್ಲಿ ಅಡಗಿದೆ. ನಮ್ಮೆಲ್ಲರಲ್ಲೂ ಸಂಗೀತವಿದೆ. ಆ ಸಂಗೀತದಲ್ಲಿ ನಾವಿದ್ದೇವೆ. ಹೃದಯದ ಬಾಗಿಲನ್ನು ತೆರೆದು ಅದರೊಳಗಿರುವ ಸರಿಗಮಪ’ದನಿ’ಯನ್ನು ಸಂಭ್ರಮಿಸುವ, ಎಲ್ಲೆಲ್ಲೂ ಸಂಗೀತವನ್ನೇ ಕೇಳುವ ಪ್ರತಿಭೆಗೆ, ನಿಸರ್ಗವೇ ದೈವ, ಹರಸುವವರೆಲ್ಲರೂ ಮಾದಪ್ಪರೇ. ಹೀಗೆ ಜಗತ್ತೇ ನಾದಮಯ ಎನ್ನುವ ಭಾವ ಸೂಸುವ ಹಾಡು 'ಮಾದಪ್ಪ'. ಇದೇ ಭಾವವನ್ನು ಜೀವವಾಗಿಸಿಕೊಂಡು, ಹಾಡಬೇಕಷ್ಟೇ ಎಂದು ಹಂಬಲಿಸುವ ಪ್ರತಿಭೆಯ ಕಥಾನಕವೇ 'ಆರ್ಕೆಸ್ಟ್ರಾ ಮೈಸೂರು' ಸಿನೆಮಾ ಎಂದು ತಿಳಿಸಿದ್ದಾರೆ.
ಇನ್ನು ಹಾಡನ್ನು ಮಂಡ್ಯದ ಗ್ರಾಮೀಣ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಹಸಿರು ಶಾಲು ತೊಟ್ಟು ಡಾಲಿ ಧನಂಜಯ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ರಘು ದೀಕ್ಷಿತ್, ಜವೀನ್ ಸಜ್ಜು, ಕಲಾವಿದ ಬಾದಲ್ ನಂಜುಂಡಸ್ವಾಮಿ ಜಾನಪದ ಗಾಯಕರಾಗಿ ಹಾಡಿನಲ್ಲಿ ಅಭಿನಯಿಸಿದ್ದಾರೆ.
ಆರ್ಕೆಸ್ಟ್ರಾ ಮೈಸೂರು ಸಿನಿಮಾದ ನಾಯಕ ನಟನಾಗಿ ಪೂರ್ಣಚಂದ್ರ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಸುನೀಲ್ ಮೈಸೂರು ನಿರ್ದೇಶನವಿದೆ.
ವರದಿ: ಕಾವ್ಯಾ ವಿ
Published by:
Harshith AS
First published:
April 13, 2021, 6:58 PM IST