Sushma ChakreSushma Chakre
|
news18-kannada Updated:April 16, 2021, 11:28 AM IST
ವಾರದ ಕತೆ ಕಿಚ್ಚನ ಜೊತೆ
ಬಿಗ್ ಬಾಸ್ ಕನ್ನಡ 8ನೇ ಸೀಸನ್ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಿಗ್ಬಾಸ್ನಿಂದ ಈಗಾಗಲೇ 6 ಸ್ಪರ್ಧಿಗಳು ಎಮಿಲಿನೇಟ್ ಆಗಿದ್ದಾರೆ. ನಾಳೆ ಹಾಗೂ ಭಾನುವಾರ ನಡೆಯಲಿರುವ ವೀಕೆಂಡ್ ಎಪಿಸೋಡ್ನಲ್ಲಿ ಇನ್ನೊಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಹೋಗುವುದು ಖಚಿತವಾಗಿದೆ. ಬಿಗ್ ಬಾಸ್ ಪ್ರೇಕ್ಷಕರು ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುವ 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್ಗಾಗಿ ಕಾಯುತ್ತಿರುತ್ತಾರೆ. ಆದರೆ, ಈ ವಾರ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಬರುವುದಿಲ್ಲ!
ಅರೆ, ಬಿಗ್ ಬಾಸ್ ಶೋನಿಂದ ಕಿಚ್ಚ ಸುದೀಪ್ ಹೊರ ನಡೆದರಾ? ಎಂದು ಅಚ್ಚರಿ ಪಡಬೇಡಿ. ನಟ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯವಿರುವುದರಿಂದ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹೀಗಾಗಿ, ಅವರು ಇನ್ನೊಂದು ವಾರ ಮನೆಯಲ್ಲೇ ಸಂಪೂರ್ಣ ವಿಶ್ರಾಂತಿ ಪಡೆಯಬೇಕಾದ್ದರಿಂದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿದ್ದು, ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ಆದರೆ, ವೈದ್ಯರು ಇನ್ನೂ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ, ಬಿಗ್ಬಾಸ್ ಕನ್ನಡ 8ನೇ ಸೀಸನ್ನ ಈ ವೀಕೆಂಡ್ನ ಎಪಿಸೋಡ್ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ, ಬಿಗ್ ಬಾಸ್ ಕನ್ನಡದ ಕ್ರಿಯೇಟಿವ್ ಟೀಂ ಈ ವೀಕೆಂಡ್ನಲ್ಲಿ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ಯಾವ ರೀತಿಯ ವಿಭಿನ್ನವಾದ ಪ್ಲಾನ್ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
ಈ ವಾರ ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಹಾಗೇ, ಪ್ರಿಯಾಂಕಾ ತಿಮ್ಮೇಶ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವುದರಿಂದ ಅವರು ಕೂಡ ನಾಮಿನೇಷನ್ಗೆ ಆಯ್ಕೆಯಾಗಿಲ್ಲ. ಉಳಿದಂತೆ ಶಮಂತ್ ಗೌಡ, ಕೆ.ಪಿ. ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ವಿಶ್ವನಾಥ್, ರಾಜೀವ್, ಮಂಜು ಪಾವಗಡ, ದಿವ್ಯಾ ಸುರೇಶ್ ಈ ವಾರ ನಾಮಿನೇಟ್ ಆಗಿದ್ದಾರೆ.
ಈ 8 ಜನರಲ್ಲಿ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ. ಕಳೆದ ವಾರ ಶಮಂತ್ ಗೌಡ ಎಲಿಮಿನೇಟ್ ಆಗಿದ್ದರೂ ಅವರ ಬದಲಾಗಿ ವೈಜಯಂತಿ ಅಡಿಗ ಸ್ವ ಇಚ್ಛೆಯಿಂದ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು.
Published by:
Sushma Chakre
First published:
April 16, 2021, 11:26 AM IST