news18-kannada Updated:April 19, 2021, 11:57 AM IST
ಕೊಪ್ಪಳದ ಕನಕಾಚಲ ಚಿತ್ರಮಂದಿರ
ಕೊಪ್ಪಳ (ಏಪ್ರಿಲ್ 19): ಮತ್ತೆ ಕೊರೋನಾಘಾತ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಟಫ್ ರೂಲ್ಸ್ ಜಾರಿಗೊಳಿಸಲು ಮುಂದಾಗಿದ್ದು ಚಿತ್ರಮಂದಿರಗಳಿಗೂ ಶೇಕಡಾ 50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿದೆ. ಇದು ಚಿತ್ರಮಂದಿರಗಳ ಮಾಲೀಕರಿಗೆ ನುಂಗಲಾರದ ತುತ್ತಾಗಿಪರಿಣಮಿಸಿವೆ. ಕೊಪ್ಪಳ ಜಿಲ್ಲೆಯ ಚಿತ್ರಮಂದಿರಗಳ ಪರಿಸಗ್ಥಿತಿಯೇನೂ ವಿಭಿನ್ನವಾಗಿಲ್ಲ.
ಕೊಪ್ಪಳದ ಪುರಾತನವಾದ ಹಾಗೂ ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ಕನಕಾಚಲ ಚಿತ್ರಮಂದಿರ ಇದೀಗ ಸಂಪೂರ್ಣವಾಗಿ ನೆಲಸಮವಾಗುತ್ತಿದೆ. ‘ನರಗುಂದ ಬಂಡಾಯ’ ಈ ಥಿಯೇಟರ್ ನಲ್ಲಿ ಬಿಡುಗಡೆಯಾದ ಕೊನೆಯ ಚಿತ್ರ. ಕಳೆದ ವರ್ಷದ ಲಾಕ್ಡೌನ್ ಹಾಗೂ ಪ್ರೇಕ್ಷಕರ ಕೊರತೆಯಿಂದ ಚಿತ್ರಮಂದಿರವನ್ನು ಕೆಡವಲಾಗಿದೆ. ಕೊಪ್ಪಳದಲ್ಲಿದ್ದ ಒಟ್ಟು 5 ಚಿತ್ರಮಂದಿರಗಳ ಪೈಕಿ ಈಗ ಕಾರ್ಯ ನಿರ್ವಹಿಸುತ್ತಿರುವುದು ಕೇವಲ 3 ಚಿತ್ರಮಂದಿರಗಳು ಮಾತ್ರ. ಸ್ಟಾರ್ ಚಿತ್ರಮಂದಿರ, ಲಾಕ್ಡೌನ್ ಮುಗಿದರೂ ಕಾರ್ಯಾರಂಭ ಮಾಡಿಲ್ಲ. ಕಾರಣ ಪ್ರೇಕ್ಷಕರ ಕೊರತೆ. ಒಟ್ಟಾರೆ ಜಿಲ್ಲೆಯಲ್ಲಿದ್ದ 32 ಚಿತ್ರಮಂದಿರಗಳ ಪೈಕಿ 17 ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಸಿನಿಮಾ ಕಣ್ತುಂಬಿಕೊಳ್ಳುತ್ತಿದ್ದಾರೆ. 10ಕ್ಕೂ ಅಧಿಕ ಚಿತ್ರಮಂದಿರಗಳು ಕಲ್ಯಾಣಮಂಟಪಗಳಾಗಿ ಪರಿವರ್ತನೆಗೊಂಡಿವೆ.
‘ಕೃಷ್ಣಾ ಟಾಕೀಸ್’ ಕಳೆದ ಶುಕ್ರವಾರವಷ್ಟೇ ಬಿಡುಗಡೆಗೊಂಡ ಸಿನಿಮಾ. ಇಲ್ಲಿನ ಬೈಕ್ ಸ್ಡ್ಯಾಂಡ್ ನೋಡಿದರೆ ಗೊತ್ತಾಗುತ್ತೆ ಪ್ರೇಕ್ಷಕರ ಸಂಖ್ಯೆ ಎಷ್ಟಿದೆ ಎಂದು. ಒಂದು ಪ್ರದರ್ಶನಕ್ಕೆ 10-15 ಜನ ಮಾತ್ರ ಸಿನಿಮಾ ನೋಡಲು ಬರುತ್ತಿದ್ದಾರೆ. ಚಿತ್ರ ಚನ್ನಾಗಿದ್ದರೂ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಹೀಗಾದರೆ ಚಿತ್ರಮಂದಿರದ ಕಾರ್ಮಿಕರ ಪರಿಸ್ಥಿತಿ ಏನಾಗಬೇಡ? ಜೊತೆಗೆ ಸರಕಾರದ ನಿಯಮಗಳು ಹೀಗೇ ಮುಂದುವರೆದರೆ ನಮ್ಮ ಬದುಕು ಜಟಿಲವಾಗುತ್ತದೆ ಅಂತಾರೆ ಚಿತ್ರಮಂದಿರದ ಸಿಬ್ಬಂದಿ.
ಇದು ಚಿತ್ರಮಂದಿರ ಆರಂಭಗೊಂಡಿರುವ ಸ್ಥಿತಿಯಾದರೆ ಇನ್ನೂ ಕೊಪ್ಪಳದಲ್ಲಿ ಹಲವು ಸಿನಿಮಾಗಳನ್ನು ನೂರು ದಿನ ಓಡಿಸಿದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಬೇಕಾದ ಸ್ಟಾರ್ ಚಿತ್ರಮಂದಿರ ಲಾಕ್ಡೌನ್ ನಂತರ ಪುನಾರಂಭಗೊಳ್ಳಲೇ ಇಲ್ಲ. ಪ್ರೇಕ್ಷಕರ ಕೊರತೆ ಜೊತೆಗೆ ಸರಕಾರದ ಟಫ್ ರೂಲ್ಸ್ಗಳನ್ನು ನೋಡಿದರೆ ಚಿತ್ರಮಂದಿರ ಆರಂಭಿಸಬೇಕೇ? ಬೇಡವೇ? ಎಂಬ ಚಿಂತೆ ಕಾಡುತ್ತಿದೆ ಅಂತಾರೆ ಸ್ಟಾರ್ ಚಿತ್ರಮಂದಿರದ ಮಾಲೀಕ ಸೈಯದ್ ಜಾವೀದ್ ಖಾದ್ರಿ.
ಒಟ್ಟಾರೆ ಚಿತ್ರಮಂದಿರಗಳ ಪರಿಸ್ಥಿತಿ, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಅತಂತ್ರವಾಗಿದೆ. ಇದಕ್ಕೆ ಕಾರಣ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಜಾರಿಗೊಳಿಸಿರುವ ಟಫ್ ರೂಲ್ಸ್ ಮತ್ತು ಪ್ರೇಕ್ಷಕರ ಕೊರತೆ ಎಂಬುದು ಮಾತ್ರ ಸ್ಪಷ್ಟ.
Published by:
Soumya KN
First published:
April 19, 2021, 11:54 AM IST