news18-kannada Updated:April 19, 2021, 11:31 AM IST
ಧಾರವಾಡದ ಕರ್ನಾಟಕ ವಿವಿ ಕ್ಯಾಂಪಸ್ನಲ್ಲಿ ಕಾಣಿಸಿಕೊಂಡ ಆನೆಗಾಗಿ ಅರಣ್ಯ ಸಿಬ್ಬಂದಿ ಶೋಧ
ಧಾರವಾಡ: ಅದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಸ್ಥಳ. ಈ ಬೃಹತ್ ಕ್ಯಾಂಪಸ್ನಲ್ಲಿ ಹಿಂದೆ ಮರಗಳನ್ನು ಸಹ ಬೆಳೆಸಲಾಗಿದೆ. ವಿದ್ಯಾರ್ಥಿಗಳಷ್ಟೇ ಬರುವ ವಿದ್ಯಾಲಯಕ್ಕೆ ಗಜರಾಜ ಎಂಟ್ರಿ ಕೊಟ್ಟಿದ್ದಾನೆ. ಹೌದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಗೆ ಭಾನುವಾರ ಗಜರಾಜನ ಆಗಮನವಾಗಿದೆ. ಇದು ನೋಡುಗರಿಗೆ ಸಂತಸ ಮೂಡಿದರೆ, ವಿದ್ಯಾರ್ಥಿಗಳಲ್ಲಿ ಹಾಗೂ ಪ್ರಾಧ್ಯಾಪಕರಲ್ಲಿ ಆತಂಕ ಮೂಡಿಸಿದೆ.
ಶನಿವಾರ ತಡರಾತ್ರಿಯೇ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ ಹಿಂಭಾಗದಲ್ಲಿ ಗಜರಾಜ ಮೊಕ್ಕಾಂ ಹೂಡಿರಬಹುದು. ಆದ್ರೆ ಬೆಳಗಿನ ಜಾವ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಕಣ್ಣಿಗೆ ಈ ಆನೆ ಕಂಡಿದೆ. ಆನೆ ಕಂಡಿದ್ದೇ ತಡ ವಿದ್ಯಾರ್ಥಿಗಳು ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿ ಕವಿವಿ ಕುಲಪತಿಗಳಿಗೆ ತಿಳಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರತ್ಯಕ್ಷಗೊಂಡ ಗಜರಾಜನ ವೀಕ್ಷಣೆಗೆ ಸಾರ್ವಜನಿಕರು ಹಿಂಡು-ಹಿಂಡಾಗಿ ಬರುತ್ರಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಪರಿಸ್ಥಿತಿ ಪರಿಶೀಲಿಸಿ, ಆನೆಯನ್ನು ಪುನಃ ಅರಣ್ಯಕ್ಕೆ ಕಳಿಸಲು ಸನ್ನದ್ಧರಾಗಿದ್ದಾರೆ.
ಆನೆ ಇರುವಿಕೆ ಬಗ್ಗೆ ಕಾರ್ಯಾಚರಣೆ ನಡೆಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಮಾತನಾಡಿ, ದಾರಿ ತಪ್ಪಿ ಕವಿವಿ ಆವರಣಕ್ಕೆ ಆನೆ ಬಂದಿದೆ. ರಾತ್ರಿ ಕಾರ್ಯಾಚರಣೆ ಕೈಗೊಂಡು ಪುನಃ ಅರಣ್ಯಕ್ಕೆ ಕಳಿಸಲಿದೆ ಎಂದರು.
ಇದನ್ನೂ ಓದಿ: ಹನುಮಂತ ಹುಟ್ಟಿದ್ದೆಲ್ಲಿ? ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ತಾರಕಕ್ಕೇರಿದ ಹನುಮ ಜನ್ಮಭೂಮಿ ವಿವಾದ !
ಉತ್ತರ ಕನ್ನಡ ಜಿಲ್ಲೆ, ಕಲಘಟಗಿ ಹಾಗೂ ಅಳ್ನಾವರ ತಾಲೂಕಿನಲ್ಲಿ ಆನೆಗಳ ಓಡಾಟದ ಮಾರ್ಗಗಳಿವೆ. ಈ ಭಾಗದಲ್ಲಿ ಬೆಳಗಳು ಬದಲಾಗಿವೆ. ಇದರಿಂದ ಆಹಾರ-ನೀರು ಅರಸಿ, ಕಾಡಾನೆಗಳು ನಗರದತ್ತ ಬರುತ್ತಿವೆ ಎಂದು ತಿಳಿಸಿದರು.
ರಾತ್ರಿ ವೇಳೆ ಕವಿವಿ ಕ್ಯಾಂಪಸ್ ಹೊರಗೆ ಸಾರ್ವಜನಿಕರು ಬರಬಾರದು. ಮುಖ್ಯವಾಗಿ ವಿದ್ಯಾರ್ಥಿಗಳು ಈ ಕಡೆಗೆ ಸುಳಿಯದಂತೆ ಎಚ್ಚರ ವಹಿಸಿದೆ. ದ್ರೋಣ ಬಳಸಿ, ಆನೆ ಪತ್ತೆ ಮಾಡಿದ ಬಳಿಕ ರಾತ್ರಿ ಕಾರ್ಯಾಚರಣೆ ಕೈಗೊಳ್ಳಲಿದೆ ಎಂದರು.ಗುಂಪು ಸೇರಿ ಗೊಂದಲದ ವಾತಾವರಣ ಸೃಷ್ಟಿಸಬಾರದು. ಅರಣ್ಯ ಇಲಾಖೆ ಕಾಡಾನೆ ಸಂರಕ್ಷಿಸಿ, ಜನರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸಲಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆಯೂ ಅಳ್ನಾವರ, ಕಲಘಟಗಿ ಹಾಗೂ ಧಾರವಾಡ ತಾಲೂಕಿನಲ್ಲಿ ಆನೆಗಳು ಪ್ರತ್ಯಕ್ಷವಾಗಿವೆ. ಈಗ ಬೇಸಿಗೆ ಹಿನ್ನಲೆ ಕಾಡಿನಲ್ಲಿ ಆಹಾರದ ಕೊರತೆ ಹಾಗೂ ನೀರಿನ ಸಮಸ್ಯೆ ಉಲ್ಬಣದಿಂದ ಗಜರಾಜ ನಗರದತ್ತ ಆಗಮಿಸುತ್ತಿವೆ.
ಇದನ್ನೂ ಓದಿ: Raichur Coronavirus: ಮಸ್ಕಿ ಉಪ ಚುನಾವಣೆ ಬಳಿಕ ರಾಯಚೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ
ಸದ್ಯ ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ನ ಹಿಂದೆ ಮರಗಳ ಮಧ್ಯದಲ್ಲಿ ಆನೆ ಇದೆ ಎಂದು ಹೇಳಲಾಗುತ್ತಿದೆ. ರಾತ್ರಿವರೆಗೆ ಅದರ ಸ್ಥಳ ಪತ್ತೆ ಹಚ್ಚಿ ಕಾಡಿನತ್ತ ಕಳಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
ಒಟ್ಟಾರೆಯಾಗಿ ವಿದ್ಯಾರ್ಥಿಗಳಿರುವ ಸ್ಥಳಕ್ಕೆ ಬಂದ ಗಜರಾಜನ ಆತಂಕವನ್ನು ಸೃಷ್ಟಿ ಮಾಡಿದ್ದಾನೆ. ಕವಿವಿ ಕ್ಯಾಂಪಸ್ಗೆ ಬಂದ ಗಜನನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ಕಳಿಸಲಿ ಎಂವುದು ನಮ್ಮ ಆಶಯ.
ವರದಿ: ಮಂಜುನಾಥ ಯಡಳ್ಳಿ
Published by:
Vijayasarthy SN
First published:
April 19, 2021, 11:31 AM IST