news18-kannada Updated:April 17, 2021, 7:37 AM IST
ಚನ್ನಪಟ್ಟಣದ ಮಾವಿನ ಮಾರುಕಟ್ಟೆ
ರಾಮನಗರ(ಚನ್ನಪಟ್ಟಣ): ದೇಶದಾದ್ಯಂತ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ತಿಳಿಯಾಗಿದ್ದ ಪರಿಸ್ಥಿತಿ ಮತ್ತೆ ಉಗ್ರಸ್ವರೂಪ ಪಡೆದುಕೊಂಡಿದೆ. ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿಯೂ ಸಹ ಕಳೆದ 20 ದಿನಗಳಲ್ಲಿ 200 ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಕಾಣಿಸಿಕೊಂಡಿದೆ. ಆದರೆ ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್ ನಲ್ಲಿ ಮಾತ್ರ ಕೊರೋನಾ ಬಗ್ಗೆ ಯಾವುದೇ ಭಯವಿಲ್ಲದಂತೆ ವಾತವರಣ ಇದೆ.
ಕಳೆದ 1 ತಿಂಗಳಿನಿಂದ ಮಾರ್ಕೆಟ್ ಪ್ರಾರಂಭವಾಗಿದ್ದು ಮಧ್ಯಾಹ್ನ 3 ಗಂಟೆಯ ನಂತರ ಮಾವಿನ ವ್ಯಾಪಾರ ವಹಿವಾಟು ಪ್ರಾರಂಭವಾಗಿ ರಾತ್ರಿ 9 ರವರೆಗೆ ನಡೆಯುತ್ತದೆ. ಆದರೆ ಈ ಸಂದರ್ಭದಲ್ಲಿ ರೈತರು-ವ್ಯಾಪರಸ್ಥರು ಮಾಸ್ಕ್ ಹಾಕದೇ, ಸಾಮಾಜಿಕ ಅಂತರವಿಲ್ಲದೇ ಕೊರೋನಾ ನಿಯಮವನ್ನ ಗಾಳಿಗೆ ತೂರಿದ್ದಾರೆ. ಜೊತೆಗೆ ಈ ಮಾರುಕಟ್ಟೆಗೆ ಮಹಾರಾಷ್ಟ್ರ, ಪುಣೆ, ಉತ್ತರಪ್ರದೇಶದಿಂದಲೂ ಸಹ ಮ್ಯಾಂಗೋ ಮರ್ಚೆಂಟ್ ಗಳು ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಆದರೆ ಈ ಮಾರ್ಕೆಟ್ ನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ನಿರ್ವಹಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ವರ್ಗ ಸಂಪೂರ್ಣ ವಿಫಲವಾಗಿದ್ದಾರೆ. ದಿನದಿಂದ ದಿನಕ್ಕೆ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದೆ. ಜೊತೆಗೆ ರಾಮನಗರ ಜಿಲ್ಲೆಯಲ್ಲಿಯೂ ಸಹ ಕೊರೋನಾ ಕೇಸ್ ಹೆಚ್ಚುತ್ತಿದೆ. ಆದರೆ ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್ ನಲ್ಲಿ ಯಾವ ಸುರಕ್ಷಿತ ಕ್ರಮ ಇಲ್ಲದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳ ವರ್ಗ ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲೆಯ ರೈತರಿಗೆ ಸೋಂಕು ತಗುಲುವ ಸಾಧ್ಯತೆ: ಚನ್ನಪಟ್ಟಣದ ಮ್ಯಾಂಗೋ ಮಾರ್ಕೆಟ್ ನಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಉತ್ತರಪ್ರದೇಶ, ಪುಣೆ, ಮಹಾರಾಷ್ಟ್ರ, ಮಧ್ಯಪ್ರದೇಶ ದಿಂದ ಮ್ಯಾಂಗೋ ಮರ್ಚೆಂಟ್ ಗಳು ವ್ಯಾಪಾರಕ್ಕಾಗಿ ಬರುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ತಪಾಸಣೆ ಮಾಡದೇ ಮಾರ್ಕೆಟ್ ನಲ್ಲಿ ಎಂಟ್ರಿ ಕೊಡಲಾಗುತ್ತಿದೆ. ಕಳೆದ ಬಾರಿಯೂ ಸಹ ಇದೇ ತಿಂಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಆಗಲೂ ಸಹ ಸಂಬಂಧಿಸಿದ ಅಧಿಕಾರಿಗಳ ವರ್ಗ ಯಾವುದೇ ಬಿಗಿಕ್ರಮವನ್ನ ವಹಿಸಿರಲಿಲ್ಲ.
ಜೊತೆಗೆ ಚನ್ನಪಟ್ಟಣದ ಮಾರ್ಕೆಟ್ ಗೆ ರಾಮನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಹಳ್ಳಿ, ತಾಲೂಕು ಕೇಂದ್ರಗಳಿಂದ ರೈತರು ಆಗಮಿಸುತ್ತಾರೆ. ಆದರೆ ಅವರಿಗಾಗಿ ಇಲ್ಲಿ ಯಾವುದೇ ಸುರಕ್ಷಿತ ಕ್ರಮಗಳನ್ನ ವಹಿಸಿಲ್ಲ. ಮಾರ್ಕೆಟ್ ನಲ್ಲಿ ಸ್ಯಾನಿಟೈಜರ್ ವ್ಯವಸ್ಥೆ ಇಲ್ಲ, ಸಂಬಂಧಿಸಿದ ಮಳಿಗೆಗಳಲ್ಲಿ ಮಾಸ್ಕ್ ಗಳನ್ನು ಸಹ ನೀಡುತ್ತಿಲ್ಲ. ಜೊತೆಗೆ ಮಾವಿನ ಕಾಯಿ ವ್ಯಾಪಾರ ನಡೆಯುವ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುತ್ತಿಲ್ಲ. ಇದನ್ನ ಪ್ರಶ್ನೆ ಮಾಡುವವರು ಸಹ ಯಾರು ಇಲ್ಲದ ಪರಿಸ್ಥಿತಿ ಎದುರಾಗಿದೆ.
ಸಾವಿರಾರು ಜನರು ಒಂದೇ ಸ್ಥಳದಲ್ಲಿ ಸೇರುತ್ತಿದ್ದರೂ ಸಹ ಚನ್ನಪಟ್ಟಣ ತಾಲೂಕು ಆಡಳಿತ, ರಾಮನಗರ ಜಿಲ್ಲಾ ಆಡಳಿತ ಯಾವುದೇ ಮುಂಜಾಗ್ರತ ಕ್ರಮವಹಿಸುತ್ತಿಲ್ಲ. ಹಾಗಾಗಿ ಈಗ ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಚನ್ನಪಟ್ಟಣದ ಪ್ರಗತಿಪರ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
Published by:
Soumya KN
First published:
April 17, 2021, 7:37 AM IST