Kavya VKavya V
|
news18-kannada Updated:April 26, 2021, 8:50 PM IST
ಸಾಂದರ್ಭಿಕ ಚಿತ್ರ.
ನವದೆಹಲಿ: ದೇಶದಲ್ಲಿ ಕೊರೋನಾ 2ನೇ ಅಲೆಯಿಂದ ಪರಿಸ್ಥಿತಿ ಕೈ ಮೀರಿದೆ. ಸಾಂಕ್ರಾಮಿಕ ರೋಗ ಭಾರತೀಯರನ್ನು ಕಿತ್ತು ತಿನ್ನುತ್ತಿದ್ದು, ನಿತ್ಯ ಹೆಣಗಳ ರಾಶಿ ಕಣ್ಣಿಗೆ ರಾಚುತ್ತಿದೆ. ಆಕ್ಸಿಜನ್ ಸಿಗದೇ ಜನ ಉಸಿರು ಚೆಲ್ಲುತ್ತಿದ್ದಾರೆ. ಸರ್ಕಾರಗಳ ಸತತ ಪ್ರಯತ್ನಗಳಾಚೆಗೂ ಕೊರೋನಾ ಸಾವಿನ ಪ್ರಮಾಣ ತಗ್ಗುತ್ತಿಲ್ಲ. ಸೋಂಕಿನ ಮರಣಮೃದಂಗ ನಿಮಿಷ ನಿಮಿಷಕ್ಕೂ ಹೆಚ್ಚುತ್ತಲೇ ಇದೆ. ಸಾವಿಲ್ಲದ ಮನೆಯಲ್ಲಿ ಸಾಸಿವೆ ತಾ ಎಂಬಂತೆ ಕೊರೋನಾ ಸಾವಿಲ್ಲದ ಮನೆಯೇ ಇಲ್ಲವೇನೋ ಎಂಬಷ್ಟು ಕೆಲ ನಗರಗಳು ಸೂತಕಕ್ಕೀಡಾಗಿವೆ. ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಕೊರೋನಾ ಸಾವಿನ ಮೋಡ ಆವರಿಸಿದೆ. ಸೋಂಕು ಅಬ್ಬರಿಸುತ್ತಿದ್ದು, ನಿತ್ಯ ನೂರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಹೆಣಗಳನ್ನು ಹೂಳಲು ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯಲ್ಲಿ ಇಂದು ಒಂದೇ ದಿನ 350 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ನಿನ್ನೆ 357 ಮಂದಿ ಮೃತಪಟ್ಟಿದ್ದರು, ಮೊನ್ನೆ 348 ಮಂದಿ ಹೆಣವಾಗಿದ್ದಾರೆ. ಕಳೆದ ವಾರ ನಿತ್ಯ ಸರಾಸರಿ 302 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಸೋಂಕಿನ ಸಾವಿನ ದಾಹ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೀಗಾಗಿ ದೆಹಲಿಯಲ್ಲಿ ಎತ್ತ ಕಣ್ಣಾಡಿಸಿದರು ಸ್ಮಶಾನದ ದೃಶ್ಯವೇ ಕಾಣಸಿಗಲಾರಂಭಿಸಿದೆ.
ದೆಹಲಿಯ ಸರಾ ಕಲೈಖಾನ್ ಸ್ಮಶಾನದ ಸಿಬ್ಬಂದಿ ಮಾತಾನಾಡಿ ಹೆಣಗಳನ್ನು ಹೂಳಲು ಜಾಗವೇ ಇಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಹೀಗಾಗಲೇ ಹಲವು ಕಡೆಗಳಲ್ಲಿ ಹೊಸ ಜಾಗಗಳನ್ನು ಮಿನಿ ಸ್ಮಶಾನಗಳಾಗಿ ಮಾಡಲಾಗುತ್ತಿದೆ. ಆದರೂ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳದ ಅಭಾವ ಸೃಷ್ಟಿಯಾಗುತ್ತಿದೆ. ನಿತ್ಯ 350ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಸ್ಥಳದ ಅಭಾವ ಮತ್ತಷ್ಟು ಬಿಗಡಾಯಿಸಲಿದೆ ಎಂದರು.
Published by:
Kavya V
First published:
April 26, 2021, 8:50 PM IST