- News18 Kannada
- Last Updated: April 19, 2021, 9:54 AM IST
ಕೊಡಗು(ಏ.19): ಕೊರೊನಾ ಸೋಂಕು ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿದ್ದಷ್ಟೇ ಅಲ್ಲ. ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಕರಿನೆರಳು ಬೀರಿದೆ. ಅದರಲ್ಲೂ ಕನ್ನಡ ಚಿತ್ರದ್ಯೋಮವನ್ನು ನೆಲಕಚ್ಚುವಂತೆ ಮಾಡಿದೆ. ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ನಾಲ್ಕು ಚಿತ್ರಮಂದಿರಗಳಿದ್ದವು. ಆದರೆ ಕೋವಿಡ್ನಿಂದಾಗಿ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ನಾಲ್ಕು ಚಿತ್ರಮಂದಿರಗಳ ಪೈಕಿ ಈಗಾಗಲೇ ಒಂದು ಚಿತ್ರಮಂದಿರ ಶಾಶ್ವತವಾಗಿ ಮುಚ್ಚಿದೆ. ಜೊತೆಗೆ ಮತ್ತೊಂದು ಚಿತ್ರಮಂದಿರ ಪ್ರೇಕ್ಷಕರ ಸಂಪೂರ್ಣ ಕೊರತೆ ಅನುಭವಿಸುತ್ತಿದೆ.
ಹೌದು, ಇಡೀ ಕೊಡಗು ಜಿಲ್ಲೆಯಲ್ಲಿ ಇದ್ದದ್ದೇ ನಾಲ್ಕೇ ನಾಲ್ಕು ಚಿತ್ರಮಂದಿರಗಳು. ಅದರಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿದ್ದ ಕಾವೇರಿ ಚಿತ್ರಮಂದಿರ 2020ರ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಆದ ಲಾಕ್ ಡೌನ್ ಬಳಿಕ ಪ್ರೇಕ್ಷಕರ ಸಂಪೂರ್ಣ ಕೊರತೆ ಅನುಭವಿಸುತ್ತಿತ್ತು. ಅದಾದ ನಂತರ ಕಾವೇರಿ ಚಿತ್ರಮಂದಿರದತ್ತ ಪ್ರೇಕ್ಷಕರು ಸುಳಿದಿದ್ದು ತೀರಾ ಕಡಿಮೆ. ಹೀಗಾಗಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸಂಪೂರ್ಣ ಮುಚ್ಚಿ ಹೋಗಿದೆ. ಇದೀಗ ಅದೇ ಸರದಿಯಲ್ಲಿ ಎರಡನೇ ಥಿಯೇಟರ್ ಆಗಿ ಸುಂಟಿಕೊಪ್ಪದ ಗಣೇಶ್ ಥಿಯೇಟರ್ ರೆಡಿಯಾಗಿರುವಂತೆ ಇದೆ.
ಹೌದು ಕಾವೇರಿ ಚಿತ್ರಮಂದಿರ ಮುಚ್ಚಿದ ಬಳಿಕ ಸುಂಟಿಕೊಪ್ಪದ ಗಣೇಶ ಚಿತ್ರಮಂದಿರ ಹೇಗೋ ಬಂದಷ್ಟು ಪ್ರೇಕ್ಷಕರಿಗೆ ಚಿತ್ರ ಪ್ರದರ್ಶನ ನೀಡುತ್ತಾ, ಅವರನ್ನು ರಂಜಿಸುತಿತ್ತು. ಆದರೆ ಕಳೆದ ಒಂದು ವಾರದವರೆಗೆ ಪ್ರತೀ ಷೋಗೆ 25 ರಿಂದ 30 ಪ್ರೇಕ್ಷಕರು ಇರುತ್ತಿದ್ದರು. ಆದರೆ ಕೊರೊನಾ ಎರಡನೇ ಅಲೆ ಜಾಸ್ತ್ರಿಯಾದಾಗಿನಿಂದ ಒಬ್ಬರೇ ಒಬ್ಬರೂ ಥಿಯೇಟರ್ ನತ್ತ ಸುಳಿಯುತ್ತಿಲ್ಲ. ಹೀಗಾಗಿ ಒಂದೇ ಒಂದು ಶೋ ಕೂಡ ಮಾಡಲಾಗುತ್ತಿಲ್ಲ ಎನ್ನೋದು ಗಣೇಶ ಥಿಯೇಟರ್ ಮ್ಯಾನೇಜರ್ ರಮೇಶ್ ಬಾಬು ಅವರ ಅಳಲು.
ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಒಡೆದ ಆರೋಪ; ತನ್ನ ಮಗಳ ವಿರುದ್ಧವೇ ದೂರು ದಾಖಲಿಸಿದ ಬಾಬುರಾವ್ ಹಾನಗಲ್
ಸುಂಟಿಕೊಪ್ಪದಲ್ಲಿ ಭಾನುವಾರ ಸಂತೆ ನಡೆಯುತ್ತದೆ. ಹೀಗಾಗಿ ಈ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನದಾಗಿ ಇರುವ ಕಾಫಿತೋಟದ ಕಾರ್ಮಿಕರು ಭಾನುವಾರ ತಮ್ಮ ಕೆಲಸಗಳಿಗೆ ರಜೆ ಹಾಕಿ, ಸಂತೆ ಜೊತೆಗೆ ಗಣೇಶ ಥಿಯೇಟರ್ ನಲ್ಲಿ ಸಿನಿಮಾ ನೋಡಿ ಮನರಂಜನೆ ಪಡೆದು ವಾಪಸ್ಸಾಗುತ್ತಿದ್ದರು. ಸಹಜವಾಗಿ ಸಂತೆ ನಡೆಯುವುದರಿಂದ, ಹೌಸ್ ಫುಲ್ ಅಲ್ಲದಿದ್ದರೂ ಸಾಕಷ್ಟು ಪ್ರೇಕ್ಷಕರು ಇರುತ್ತಿದ್ದರು. ಆದರೆ ಕೊವಿಡ್ ಜಾಸ್ತಿಯಾದಾಗಿನಿಂದ ಈಗ ಒಬ್ಬರೇ ಒಬ್ಬರು ಪ್ರೇಕ್ಷಕರು ಇಲ್ಲದೆ ಒಂದು ವಾರದಿಂದ ಥಿಯೇಟರ್ ಬಂದ್ ಆಗಿದೆ.
ಚಿತ್ರಮಂದಿರದಲ್ಲಿ ಒಂದು ಸಿನಿಮಾ ರನ್ ಮಾಡಲು ದಿನಕ್ಕೆ ಕನಿಷ್ಠ ಎರಡು ಸಾವಿರ ವೆಚ್ಚ ಬರುತ್ತದೆ. ಅದನ್ನು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಐದು ಜನ ಸಿಬ್ಬಂದಿಗಳಿದ್ದು, ಅವರಿಗೆ ಸಂಬಳ ಕೊಡುವುದು ಹೇಗೆ ಎನ್ನೋ ಆತಂಕ ಶುರುವಾಗಿದೆ ಎನ್ನೋದು ಮ್ಯಾನೇಜರ್ ರಮೇಶ್ ಬಾಬು ಅವರ ಅಳಲು.
ಇನ್ನು ಕುಶಾಲನಗರದಲ್ಲಿರುವ ಥಿಯೇಟರ್ ದಿನಕ್ಕೆ ಕೇವಲ ಒಂದು ಶೋ ಮಾತ್ರ ನಡೆಸುತ್ತಿದೆ. ಇನ್ನು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲೂ ಒಂದು ಥಿಯೇಟರ್ ಇದ್ದು ಅಲ್ಲಿಯೂ ಕೋವಿಡ್ಗೆ ಹೆದರಿ ಪ್ರೇಕ್ಷಕರು ಥಿಯೇಟರ್ನತ್ತ ಸುಳಿಯುತ್ತಿಲ್ಲ. ಒಟ್ಟಿನಲ್ಲಿ ಕೊಡಗಿನಲ್ಲಿರುವ ನಾಲ್ಕು ಚಿತ್ರಮಂದಿರಗಳ ಪೈಕಿ ಈಗಾಗಲೇ ಒಂದು ಥಿಯೇಟರ್ ಮುಚ್ಚಿ ಹೋಗಿದ್ದು ಉಳಿದ ಮೂರು ತೀವ್ರ ನಷ್ಟದಲ್ಲಿವೆ.