- News18 Kannada
- Last Updated: April 19, 2021, 9:22 AM IST
- SHIVARAM ASUNDI News18 Media
ಹುಬ್ಬಳ್ಳಿ(ಏ.19): ಸದಾ ಸಂಗೀತದ ಝೇಂಕಾರ ಕೇಳಿ ಬರುತ್ತಿದ್ದ ಗಂಗೂಬಾಯಿ ಹಾನಗಲ್ ರ ಮನೆ ಕಳೆದ ಎರಡು ವರ್ಷಗಳಿಂದ ನಿಶ್ಯಬ್ಧಗೊಂಡಿದೆ. ಇತ್ತೀಚೆಗಷ್ಟೇ ಖ್ಯಾತ ತಬಲಾ ವಾದಕಿ ರಿಂಪಾ ಶಿವಾ ರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೀಗ ಅದೇ ವಾದಕ್ಕೆ ಕಾರಣವಾಗಿ, ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರುವಂತೆ ಮಾಡಿದೆ.
ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಸಾಮ್ರಾಜ್ಞೆ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಗೆ ತೆಲೆದೂಗದವರೇ ಇಲ್ಲ. ಆದ್ರೆ ಸಂಗೀತ ಕ್ಷೇತ್ರದ ಸಾಮ್ರಾಜ್ಞೆಯ ಮ್ಯೂಸಿಯಂನ್ನ ಇದೀಗ ಒಡೆದು ಹಾಕಿದ ಘಟನೆ ನಡೆದಿದ್ದು, ಸದ್ಯ ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡಿದೆ.
ಹೌದು... ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರೋ ಗಂಗೂಬಾಯಿ ಹಾನಗಲ್ ನಿವಾಸ. ಈ ನಿವಾಸ ಅಂದ್ರೆ ಇದೊಂದು ಮನೆಯಲ್ಲ, ಮ್ಯೂಸಿಯಂ ಎಂದೇ ಎಲ್ಲರೂ ಕರೆಯುತ್ತಿದ್ದರು. ಯಾಕಂದ್ರೆ ಪದ್ಮಭೂಷಣ ಪುರಸ್ಕೃತರಾದ ದಿವಂಗತ ಗಂಗೂಬಾಯಿ ಹಾನಗಲ್ ರ ಮನೆಯಲ್ಲಿ ನೀವು ಎಲ್ಲಿ ನೋಡಿರಲು ಸಾಧ್ಯವಿಲ್ಲದ ಸಂಗೀತ ಪರಿಕರಗಳಿವೆ. ದೇಶ ವಿದೇಶ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಸಂಗೀತ ಕ್ಷೇತ್ರದ ದಿಗ್ಗಜರು ಬಳಸಿದ ಸಂಗೀತ ವಾದ್ಯಗಳಿವೆ. ಪ್ರಶಸ್ತಿ ಪುರಸ್ಕಾರಗಳು ಈ ಮ್ಯೂಸಿಯಂ ನಲ್ಲಿದ್ದವು.
ಇದೀಗ ಮ್ಯೂಸಿಯಂನಲ್ಲಿದ್ದ ವಾದ್ಯಗಳನ್ನು ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾದ ಅನಿತಾ ಹಾಗೂ ಅವರ ಪತಿ ಮಹೇಶ ತಳಕಾಡ ಒಡೆದು ಹಾಕಿ, ಮ್ಯೂಸಿಯಂ ಹಾಳು ಮಾಡಿದ್ದಾರೆಂದು ಸ್ವತಃ ಮಗಳ ವಿರುದ್ದವೇ ಬಾಬುರಾವ ಹಾನಗಲ್ ಆರೋಪಿಸಿದ್ದಾರೆ. ಪದ್ಮಭೂಷಣ ಪುರಸ್ಕೃತೆ ಗಂಗೂಬಾಯಿ ಹಾನಗಲ್ ವಾಸವಿದ್ದ ಮನೆ, ಅವರ ನಿಧನದ ನಂತರ ಪುತ್ರರಾದ ಬಾಬುರಾವ್ ಹಾಗೂ ಕೃಷ್ಣರಾವ್ ವಶದಲ್ಲಿತ್ತು. ಆದ್ರೆ ಬಾಬುರಾವರವರ ಪುತ್ರಿ ಅನಿತಾ ಇದೀಗ ಮನೆಯಲ್ಲಿದ್ದ ಸಂಗೀತ ಪರಿಕರಗಳು, ಪ್ರಶಸ್ತಿ ಪುರಸ್ಕಾರಗಳು, ದಿಗ್ಗಜರು ಭೇಟಿ ನೀಡಿದ ವೇಳೆ ತಗೆದ ಅಪರೂಪದ ಛಾಯಾಚಿತ್ರಗಳಿದ್ದ ಮ್ಯೂಸಿಯಂ ಅನ್ನ ಒಡೆದ ಹಾಕಿ ಹಾಳುಗಡೆವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೀನು ಮಾರಿ ದುಡಿದು ಓದಿ ಡಾಕ್ಟರೇಟ್ ಪದವಿ ಗಳಿಸಿದ ನಿಯಾಜ್ ಪಣಕಜೆ
ನಾನು ಸದ್ಯ ಬೆಂಗಳೂರಿನಲ್ಲಿವಾಸವಿದ್ದೇನೆ. ತನ್ನ ಪತ್ರ ಮನೋಜ್ ಇರೋವರೆಗೂ ಮ್ಯುಸಿಯಮ್ ನಿರ್ವಹಣೆ ಮಾಡಿಕೊಂಡು ಹೋಗ್ತಿದ್ದ. ಆತನ ನಿಧನದ ನಂತರ ಮ್ಯುಸಿಯಮ್ ನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಚಿಂತಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಇದು ಸಾಕಾರಗೊಂಡಿರಲಿಲ್ಲ. ಇಷ್ಟರ ನಡುವೆಯೇ ತನ್ನ ಮಗಳು ಮತ್ತು ಅಳಿಯ ಬೀಗ ಒಡೆದು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಂಗೂಬಾಯಿ ಹಾನಗಲ್ ಪುತ್ರ ಬಾಬುರಾವ್ ಆಗ್ರಹಿಸಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿರೋ ಬಾಬುರಾವ್ ಪುತ್ರಿ ಅನಿತಾ ವಿರುದ್ಧ ಸಿಡಿದೆದ್ದು ಮ್ಯೂಸಿಯಂ ಉಳಿಸಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳು ಹಾಗೂ ಅಳಿಯನ ವಿರುದ್ಧವೇ ದೂರು ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಗಂಗೂಬಾಯಿ ಹಾನಗಲ್ ಮೊಮ್ಮಗ ಅರುಣ ಹಾನಗಲ್ ಸಹ ಕಿಡಿಕಾರಿದ್ದಾರೆ. ಯಾರದೆ ಅನುಮತಿ ಪಡೆಯದೆ ಒಳನುಸುಳಲಾಗಿದೆ. ಏನೇನು ಸಾಮಾನುಗಳು ನಾಪತ್ತೆಯಾಗಿವೆಯೋ ಗೊತ್ತಿಲ್ಲ. ಪೊಲೀಸರೇ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಅರುಣ ಹಾನಗಲ್ ಆಗ್ರಹಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೇಶ ಕಂಡ ಅಪರೂಪದ ಸಂಗೀತ ಸಾಮ್ರಾಜ್ಞೆ ಗಂಗೂಬಾಯಿ ಹಾನಗಲ್ ಮ್ಯೂಸಿಯಂ ಧ್ವಂಸಗೊಂಡಿರುವುದು ವಿಪರ್ಯಾಸವಾಗಿದೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ಅಪರೂಪದ ಸಂಗೀತ ಕ್ಷೇತ್ರದ ವಾದ್ಯಗಳು ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನ ಸಂಸ್ಕರಿಸಿ ಉಳಿಸಿಕೊಳ್ಳಲು ಮುಂದಾಗಬೇಕಿದೆ.