- News18 Kannada
- Last Updated: March 25, 2021, 4:03 PM IST
ಸೀರೆಯಲ್ಲಿ ತಮ್ಮ ಪಾದಗಳನ್ನು ತೋರಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಸಮರ್ಥಿಸಿಕೊಂಡಿದ್ದಾರೆ. ನ್ಯೂಸ್ 18 ಸಂದರ್ಶನದಲ್ಲಿ ಮಾತನಾಡಿದ ಅವರು, ದೀದಿ ಸೀರೆಯಲ್ಲಿ ಕಾಲನ್ನು ತೋರಿಸುವ ಮೂಲಕ ಬಂಗಾಳದ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಸೀರೆ ಧರಿಸುತ್ತಾರೆ. ಸೀರೆ ಸಭ್ಯತೆಯ ಸಂಕೇತವಾಗಿದೆ. ಆದರೆ, ಸೀರೆ ಧರಿಸಿದಾಗ ಉದ್ದೇಶಪೂರ್ವಕವಾಗಿ ಅವರು ತಮ್ಮ ಕಾಲುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋರಿಸುವುದು ಸರಿಯಲ್ಲ. ಮಹಿಳೆಯರು ಕೂಡ ಇದನ್ನು ಇಷ್ಟಪಡುವುದಿಲ್ಲ. ಇದು ಬಂಗಾಳದ ಸಂಸ್ಕೃತಿಯಲ್ಲ. ಇದನ್ನು ನಾನು ಪ್ರಶ್ನಿಸುತ್ತೇನೆ ಎಂದಿದ್ದಾರೆ. ಬಂಗಾಳದ ಸಂಸ್ಕೃತಿ ಬಗ್ಗೆ ಸಾಕಷ್ಟು ಮಾತನಾಡುವ ಸಿಎಂ ಅವರಿಂದ ಇಂತಹ ವರ್ತನೆ ನಿರೀಕ್ಷಿಸರಲಿಲ್ಲ ಎಂದು ಅವರು ಮಮತಾ ಬ್ಯಾನರ್ಜಿ ವಿರುದ್ಧ ಸಂದರ್ಶನದಲ್ಲಿ ವಾಗ್ದಾಳಿ ನಡೆಸಿದ್ದರು.
ಈ ಹಿಂದೆ ಪುರುಲಿಯಾದಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ್ದ ಘೋಷ್, ಮಮತಾ ಬ್ಯಾನರ್ಜಿ ಸೀರೆಯಲ್ಲ, ಬರ್ಮಾಡವನ್ನು ಧರಿಸಬೇಕು. ಅವರು ತಮ್ಮ ಪಾದವನ್ನು ತೋರಿಸಬೇಕು ಎಂದಿದ್ದರೆ ಸೀರೆ ಯಾಕೆ ಬೇಕು ಎಂದು ಟೀಕಿಸಿದ್ದರು. ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು.
ಈ ಹೇಳಿಕೆಯನ್ನು ಟೀಕಿಸಿದ ಟಿಎಂಸಿ, ಬಿಜೆಪಿ ನಾಯಕರು ತಮ್ಮ ಹೇಳಿಕೆ ಮೂಲಕ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂದು ಎಚ್ಚರಿಸಿತ್ತು.
ಮಾರ್ಚ್ 10ರಂದು ನಂದಿಗ್ರಾಮದಲ್ಲಿ ನಡೆದ ಅಪಘಾತದ ವೇಳೆ ತಮ್ಮ ಎಡಗಾಲಿಗೆ ಆದ ನೋವವನ್ನು ದೀದಿ ತೋರಿಸಿದ್ದರು. ಕಾಲಿಗೆ ಆದ ಪೆಟ್ಟನ್ನು ತೋರಿಸಿದ ಸಿಎಂ ಕ್ರಮ ಸಹಾನುಭೂತಿಯ ನಾಟಕವಾಗಿದೆ ಎಂದು ಬಿಜೆಪಿ ಟೀಕಿಸಿತು. ಆದರೆ, ಮಮತಾ ಬ್ಯಾನರ್ಜಿ ತಮ್ಮ ಮೇಲೆ ನಡೆದ ಉದ್ದೇಶ ಪೂರ್ವಕ ಪಿತೂರಿ ಇದು ಎಂದು ಆರೋಪಿಸಿದ್ದರು. ಅಲ್ಲದೇ ಘಟನೆ ಬಳಿಕ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಹೊಂದಿದ ದೀದಿ, ವೀಲ್ಚೇರ್ ಮೇಲೆ ಚುನಾವಣಾ ಪ್ರಚಾರ ಆರಂಭಿಸಿದರು.
ಇದನ್ನು ಓದಿ: ಪ್ರವಾಸಿಗರನ್ನು ಸ್ವಾಗತಿಸುತ್ತಿವೆ ಕಣಿವೆ ರಾಜ್ಯದ ಟ್ಯೂಲಿಪ್ ಹೂವುಗಳು
ಸಂದರ್ಶನದಲ್ಲಿ ತಮ್ಮ ಹೇಳಿಕೆಗೆ ಕುರಿತು ಮಾತನಾಡಿದ ಘೋಷ್ ನಾನು ಮಹಿಳೆಯರನ್ನು ಅವಮಾನಿಸಿಲ್ಲ. ವಾಸ್ತವವಾಗಿ ದೀದಿ ಅವರು, ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅನ್ನು ನಾನು ಪ್ರತಿಭಟಿಸುತ್ತೇನೆ. ಈ ಕುರಿತು ಯಾವುದೇ ಸ್ಪಷ್ಟೀಕರಿಣದ ಅಗತ್ಯವಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದೇನೆ ಎಂದರು.
ಇದೇ ವೇಳೆ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದ ಅವರು, ಸಿಎಂ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ. ಅವರು ಜನರ ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ. ಕಳೆದ 10 ವರ್ಷದಿಂದ ರಾಜ್ಯದ ಅಭಿವೃದ್ಧಿ ಲೆಕ್ಕ ಕೊಡುವ ಬದಲು ಈ ರೀತಿ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.