- News18 Kannada
- Last Updated: April 15, 2021, 3:48 PM IST
ಬಾಲಿವುಡ್ನಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆಗೆ ತವರೂರು ಬೆಂಗಳೂರು ನೆನಪಾಗಿದೆ. ಗಂಡ ರಣವೀರ್ ಸಮೇತ ‘ಪದ್ಮಾವತಿ’ ತವರು ಮನೆ ಸೇರಿದ್ದಾರೆ. ಸಂಕಷ್ಟ ಬಂದಾಗ ತವರು ಮನೆಯೇ ಆಸರೆ ಎಂಬಂತೆ ದೀಪಿಕಾ ಅಪ್ಪಅಮ್ಮನ ಮನೆಗೆ ಬಂದು ನೆಲೆಸಿದ್ದಾರೆ. ಯಾಕಪ್ಪ ಅತ್ತೆ-ಮಾವನ ಮನೆಯಲ್ಲೇ ಏನಾದ್ರು ಸಮಸ್ಯೆ ಆಯ್ತಾ ಅಂತ ಚಿಂತಿಸಬೇಡಿ. ಕೊರೋನಾಗೆ ಹೆದರಿಕೊಂಡು ದೀಪ್-ವೀರ್ ಜೋಡಿ ಸಿಲಿಕಾನ್ ಸಿಟಿಯ ಕದ ತಟ್ಟಿದ್ದಾರೆ. ಮುಂಬೈನಲ್ಲೇ ಇದ್ದರೆ ಸೇಫ್ ಅಲ್ಲ ಅನಿಸಿತೋ ಏನೋ ಬೆಂಗಳೂರೇ ಬೆಸ್ಟ್ ಅಂದ್ಕೊಂಡು ತಂದೆ ಪ್ರಕಾಶ್ ಪಡುಕೋಣೆ ಮನೆಗೆ ಬಂದಿಳಿದಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ಉಗ್ರರೂಪ ತಾಳಿದೆ. ಮುಂಬೈನಲ್ಲಂತೂ ಅರ್ಧ ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ನಿತ್ಯ ದಾಖಲಾಗುತ್ತಿವೆ. ಮಾಯಾನಗರಿ ಮುಂಬೈ ಈಗ ಕೊರೋನಾ ಕಪಿಮುಷ್ಠಿಗೆ ಒಳಗಾಗಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ಸದ್ಯ ಜನತಾ ಕರ್ಫ್ಯೂ ಜಾರಿಯಾಗಿದ್ದು ವಲಸಿಗರು ಹುಟ್ಟೂರಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಬಾಲಿವುಡ್ ಮಂದಿಯೂ ಹೊರತಾಗಿಲ್ಲ. ಬೆಂಗಳೂರಿನಿಂದ ಮುಂಬೈಗೆ ಹೋಗಿ ಸ್ಟಾರ್ ಆಗಿ ಮಿಂಚುಸುತ್ತಿರುವ ಬ್ಯೂಟಿ ಕ್ವೀನ್ ದೀಪಿಕಾನೂ ಮುಂಬೈ ತೊರೆದಿದ್ದಾರೆ.
ಜನತಾ ಕರ್ಫ್ಯೂಯಿಂದ ಮಹಾರಾಷ್ಟ್ರದಲ್ಲಿ ಸಿನಿಮಾ ಶೂಟಿಂಗ್ಗೂ ಬ್ರೇಕ್ ಬಿದ್ದಿದೆ. ಮೇ 1ರವರೆಗೆ ಬಾಲಿವುಡ್ ಬಿಕೋ ಎನ್ನಲಿದೆ. ಸಾಲದಕ್ಕೆ ಕೊರೋನಾ ಭಯ ಬೇರೆ. ಇದರಿಂದ ಹೆದರಿದ ದೀಪಿಕಾ ನಿನ್ನೆ ರಾತ್ರಿಯೇ ಪತಿ ರಣವೀರ್ ಸಿಂಗ್ ಜೊತೆ ಫ್ಲೈಟ್ನಲ್ಲಿ ಬೆಂಗಳೂರಿಗೆ ಹಾರಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ನೆಲೆಸಿರುವ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜಾಲರ ಮನೆಗೆ ಆಗಮಿಸಿದ್ದಾರೆ. ಇದಕ್ಕೆ ಹೇಳೋದಲ್ವೇ ಸಂಕಷ್ಟ ಬಂದಾಗ ಹೆಣ್ಣು ಮಕ್ಕಳಿಗೆ ತವರೇ ಆಸರೆ ಅಂತ.ಮುಂಬೈ ಸೋಂಕಿಗೆ ಹೆದರಿ ಅಳಿಯ ರಣವೀರ್ ಸಿಂಗ್ ಕೂಡ ಪತ್ನಿಯ ಜೊತೆ ಅತ್ತೆ-ಮಾವನ ಮನೆ ಸೇರಿದ್ದಾರೆ.
ರಾಮ್ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ನಂತ ಹಿಟ್ ಸಿನಿಮಾಗಳನ್ನು ನೀಡಿದ ದೀಪಿಕಾ-ರಣವೀರ್ ಜೋಡಿ ‘83’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಕೋವಿಡ್ ಪರಿಸ್ಥಿತಿ ಇಲ್ಲದಿದ್ದರೆ ಇಷ್ಟರಲ್ಲಾಗಲೇ ಸಿನಿಮಾ ರಿಲೀಸ್ ಆಗಬೇಕಿತ್ತು
(ವರದಿ: ಕಾವ್ಯಾ ವಿ)