- News18 Kannada
- Last Updated: April 16, 2021, 5:05 PM IST
ಮೊನ್ನೆಯಷ್ಟೇ ಕೊರೋನಾದಿಂದ ಗುಣಮುಖರಾಗಿ ದುಬಾರಿ ಕಾರು ಖರೀದಿಸಿದ್ದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ಗೆ ಖ್ಯಾತ ನಿರ್ದೇಶಕ ಕರಣ್ ಜೋಹರ್ ಶಾಕ್ ಕೊಟ್ಟಿದ್ದಾರೆ. ತಮ್ಮ ಧರ್ಮ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿದ್ದ ದೋಸ್ತಾನ-2 ಚಿತ್ರದಿಂದ ಕಾರ್ತಿಕ್ರನ್ನು ಹೊರ ಹಾಕಿದ್ದಾರೆ. ಕೆಲಸಕ್ಕೆ ಸಂಬಂಧಿಸಿದಂತೆ ಸರಿಯಾಗಿ ನಡೆದುಕೊಂಡಿಲ್ಲ ಎಂದು ಕಾರಣ ಕೊಟ್ಟು ಸಿನಿಮಾದಿಂದ ಕಿತ್ತು ಹಾಕಿದ್ದಾರೆ. ಧರ್ಮ ಬ್ಯಾನರ್ ಅಡಿ ಕಾರ್ತಿಕ್ ಒಪ್ಪಿಕೊಂಡಿದ್ದ ಇನ್ನು ಎರಡು ಸಿನಿಮಾಗಳಿಂದಲೂ ದೂರ ಇಡಲಾಗಿದೆ. ಈ ಸುದ್ದಿ ಹೊರ ಬೀಳುತ್ತಲೇ ಬಾಲಿವುಡ್ನಲ್ಲಿ ಮತ್ತೆ ನೆಪೊಟಿಸಮ್ ಚರ್ಚೆ ಜೋರಾಗಿದೆ.
ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದಾಗಲೂ ಕರಣ್ ಜೋಹರ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಸುಶಾಂತ್ರನ್ನು ಕರಣ್ ಜೋಹರ್ ತಮ್ಮ ಬ್ಯಾನರ್ನಿಂದ ಬ್ಯಾನ್ ಮಾಡಿದ್ದರು. ಇದರಿಂದ ಅವಕಾಶಗಳಿಲ್ಲದೇ ಸುಶಾಂತ್ ಆತ್ಮಹತ್ಯೆಗೆ ಶರಣಾದರು ಎಂಬ ಆರೋಪ ಕೇಳಿ ಬಂದಿತ್ತು. ನಟಿ ಕಂಗನಾ ರನಾವತ್ ನೇರವಾಗೇ ಕರಣ್ ವಿರುದ್ಧ ಆರೋಪಗಳ ಸುರಿ ಮಳೆಗೈದಿದ್ದರು. ಸಿನಿಮಾ ನಟರ ಮಕ್ಕಳನ್ನು ಮಾತ್ರ ಕರಣ್ ಬೆಳೆಸುತ್ತಾರೆ. ಸಿನಿಮಾ ಹಿನ್ನೆಲೆ ಇಲ್ಲದವರನ್ನು ತುಳಿಯುತ್ತಾರೆ ಎಂದು ಕಿಡಿಕಾರಿದ್ದರು.
ಅದೆಲ್ಲಾ ವಿವಾದ ತಣ್ಣಗಾದ ಬೆನ್ನಲ್ಲೇ ಕಾರ್ತಿಕ್ ಆರ್ಯನ್ ಬ್ಯಾನ್ ಸದ್ದು ಮಾಡುತ್ತಿದೆ. ಸಿನಿಮಾ ಹಿನ್ನೆಲೆ ಇಲ್ಲದೆಯೇ ಹಿಂದಿ ಚಿತ್ರರಂಗಕ್ಕೆ ಬಂದಿದ್ದ ಕಾರ್ತಿಕ್ ತಮ್ಮ 'ಪ್ಯಾರ್ ಕಿ ಪಂಚನಾಮೆ', 'ಲುಕ್ಕಾ ಚುಪ್ಪಿ', 'ಲವ್ ಆಜ್ ಕಲ್', 'ಪತಿ-ಪತ್ನಿ ಅವರ್ ಓ' ಸಿನಿಮಾಗಳ ಮೂಲಕ ಯಶಸ್ಸು ಕಂಡಿದ್ದರು. ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಶೋನಲ್ಲಿ ನಟಿ ಸಾರಾ ಅಲಿ ಖಾನ್ ತಾನು ಕಾರ್ತಿಕ್ ಆರ್ಯನ್ನ ಡೇಟ್ ಮಾಡಲು ಇಷ್ಟಪಡ್ತೀನಿ ಎಂದಿದ್ದು ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಕರಣ್ ತಮ್ಮ ಶೋಗೆ ಕಾರ್ತಿಕ್ರನ್ನು ಕರೆದಿದ್ದರು.
ಅಂದಿನಿಂದಲೂ ಕರಣ್ ಜೋಹರ್ ಆಪ್ತ ವಲಯದಲ್ಲಿ ಕಾರ್ತಿಕ್ ಕಾಣಿಸಿಕೊಂಡಿದ್ದರು. ಕರಣ್ ಜೋಹರ್ರ ಧರ್ಮ ಬ್ಯಾನರ್ನಡಿ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಸಲಿಂಗಿಗಳ ಕಥಾವಸ್ತು ಇದ್ದ 'ದೋಸ್ತಾನ' ಸಿನಿಮಾದ 2ನೇ ಅವತರಣಿಕೆ 'ದೋಸ್ತಾನ-2'ನಲ್ಲಿ ಕಾರ್ತಿಕ್ ಅಭಿನಯಿಸುತ್ತಿದ್ದರು. 20 ದಿನಗಳ ಕಾಲ ಶೂಟಿಂಗ್ನಲ್ಲೂ ಭಾಗಿಯಾಗಿದ್ದರು. ಆದರೆ ಈಗ ಏಕಾಏಕಿ ಸಿನಿಮಾದಿಂದ ಕಾರ್ತಿಕ್ನನ್ನು ಕಿತ್ತು ಹಾಕಿದ್ದಾರೆ. ಮುಂದೆ ಕಾರ್ತಿಕ್ ಜೊತೆ ಯಾವುದೇ ಸಿನಿಮಾಗಳನ್ನು ಮಾಡಲ್ಲ ಎಂದು ಧರ್ಮ ಪ್ರೊಡಕ್ಷನ್ ನಿರ್ಧಾರ ತೆಗೆದುಕೊಂಡಿದೆ.
ಸಿನಿಮಾ ಸೆಟ್ನಲ್ಲಿ ವೃತ್ತಿಪರತೆಯಿಂದ ನಡೆದುಕೊಂಡಿಲ್ಲ. ಶೂಟಿಂಗ್ಗೆ ಸರಿಯಾಗಿ ಡೇಟ್ಸ್ ಕೊಟ್ಟಿಲ್ಲ ಎಂದು ಆರೋಪಿಸಿ ಕಾರ್ತಿಕ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಆದರೆ ಕಾರ್ತಿಕ್ ಅಭಿಮಾನಿಗಳು ಮಾತ್ರ ಕರಣ್ ಜೋಹರ್ ವಿರುದ್ಧ ನೆಪೊಟಿಸಮ್ ಆರೋಪ ಹೊರಿಸಿ ಟೀಕಿಸುತ್ತಿದ್ದಾರೆ. ಸುಶಾಂತ್ಗೆ ಮಾಡಿದಂತೆ ಕಾರ್ತಿಕ್ಗೂ ಕರಣ್ ಜೋಹರ್ ಅನ್ಯಾಯ ಮಾಡ್ತಿದ್ದಾರೆ. ಸಿನಿಮಾ ಹಿನ್ನೆಲೆ ಇಲ್ಲದವರನ್ನು ಕರಣ್ ತುಳಿಯುತ್ತಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ
(ವರದಿ: ಕಾವ್ಯಾ ವಿ)