- News18 Kannada
- Last Updated: April 26, 2021, 9:53 AM IST
- DHARANEESHA B N News18 Media
ನವದೆಹಲಿ, ಏ. 26: ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ ಎನ್ನುವುದು ಒಂದು ಸಮಸ್ಯೆಯಾದರೆ ರೋಗಿಗಳಿಗೆ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ ಎನ್ನುವುದು ಇನ್ನೊಂದು ಬಗೆಯ ಸಮಸ್ಯೆ. ಆಕ್ಸಿಜನ್ ಸಮಸ್ಯೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಕಾದಾಟಕ್ಕೂ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅಮೇರಿಕಾವು ಭಾರತದ ನೆರವಿಗೆ ಧಾವಿಸಿದ್ದು 5 ಟನ್ ಆಮ್ಲಜನಕವನ್ನು (Oxygen Cylinders) ಕಳುಹಿಸುತ್ತಿದೆ.
ಮೊದಲಿಗೆ ಅಮೇರಿಕಾವು ಭಾರತದಲ್ಲಿ ರೆಮಿಡೆಸಿವಿರ್ (Remedesivir) ಉತ್ಪಾದನೆಗೆ ಅಗತ್ಯ ಇದ್ದ ಕಚ್ಛಾ ವಸ್ತುಗಳನ್ನು ರಫ್ತು ಮಾಡಲು ನಿಷೇಧ ಹೇರಿತ್ತು. ಆದರೀಗ ಭಾರತದಲ್ಲಿ ಕೊರೊನಾ ಹೆಚ್ಚಳ ಮತ್ತು ಆಮ್ಲಜನಕದ ವಿಷಯದಲ್ಲಿ ವಿಷಮಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಆಮ್ಲಜನಕ ಕಳುಹಿಸಲು ನಿರ್ಧರಿಸಿದೆ. ನ್ಯೂಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 5 ಟನ್ ಆಮ್ಲಜನಕವನ್ನು ಕಳುಹಿಸುತ್ತಿದೆ.
ನ್ಯೂಯಾರ್ಕ್ ನಿಂದ 5 ಟನ್ ಆಮ್ಲಜನಕವನ್ನು ಹೊತ್ತ ಏರ್ ಇಂಡಿಯಾ A102 ವಿಮಾನವು ಇಂದು ಮಧ್ಯಾಹ್ನದ ವೇಳೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನವಾಗುವ ಸಾಧ್ಯತೆ ಇದೆ. ಆಮ್ಲಜನಕ ದೆಹಲಿ ವಿಮಾನ ನಿಲ್ದಾಣ ತಲುಪಿದ ಬಳಿಕ ದೆಹಲಿಯಿಂದ ದೇಶದ ಇತರೆ ಭಾಗಗಳಿಗೆ, ಅಗತ್ಯ ಇರುವ ರಾಜ್ಯಗಳಿಗೆ ರವಾನೆ ಮಾಡಲಾಗುತ್ತದೆ.
ಇದನ್ನೂ ಓದಿ: CoronaVirus: ಭಾರತದಲ್ಲಿ ಕೈಮೀರಿದ ಕೋವಿಡ್; ಅಮೆರಿಕದಿಂದ ಸಹಾಯ ಹಸ್ತದ ಭರವಸೆ!
ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಈ ಸಂಬಂಧ ನಿನ್ನೆ (ಏಪ್ರಿಲ್ 25ರಂದು) ಟ್ವೀಟ್ ಮೂಲಕ ಅಧಿಕೃತ ಪ್ರಕಟಣೆ ಹೊರಡಿಸಿದ್ದು, "ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತ ಈ ಸಾಂಕ್ರಾಮಿಕ ರೋಗವನ್ನು ಧೈರ್ಯದಿಂದ ಎದುರಿಸಬೇಕಿದೆ. ಭಾರತದ ಸ್ನೇಹಿತರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಸಹಾಯ ಹಸ್ತ ಚಾಚಲು ಅಮೆರಿಕ ಸಿದ್ದವಾಗಿದೆ" ಎಂದು ತಿಳಿಸಲಾಗಿದೆ.
ಅಮೆರಿಕದ ಅಧಿಕಾರಿ ಜೇಕ್ ಸುಲ್ಲಿವಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, "ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಇಂದು ಮಾತನಾಡಿದ್ದೇವೆ. ಮತ್ತು ಮುಂಬರುವ ದಿನಗಳಲ್ಲಿ ನಿಕಟ ಸಂಪರ್ಕದಲ್ಲಿರಲು ನಾವು ಒಪ್ಪಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಭಾರತದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ ಮತ್ತು ನಾವು ಹೆಚ್ಚಿನ ಸರಬರಾಜು ಮತ್ತು ಸಂಪನ್ಮೂಲಗಳನ್ನು ಭಾರತಕ್ಕೆ ನಿಯೋಜಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಈ ನಡುವೆ ಆಮ್ಲಜನಕದ ಕೊರತೆ ಹಿನ್ನಲೆಯಲ್ಲಿ ಹೊಸ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಪ್ರಧಾನಮಂತ್ರಿ ಸಚಿವಾಲಯ, "ದೇಶದ ಹಲವು ಸ್ಥಳಗಳಲ್ಲಿ ಆಕ್ಸಿಜನ್ ಕೊರತೆಯ ವರದಿಗಳು ಹೆಚ್ಚಾಗುತ್ತಿರುವ ಕಾರಣ, ಜೀವ ಉಳಿಸುವ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಲಭ್ಯ ಘಟಕಗಳಲ್ಲಿ 500ಕ್ಕೂ ಹೆಚ್ಚು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು" ಎಂದು ಹೇಳಿದೆ.