- News18 Kannada
- Last Updated: April 27, 2021, 12:24 PM IST
- ಸೌಮ್ಯ ಕಳಸ News18 Media
Covid Rules: ಇನ್ನೇನು ಎಲೆಕ್ಷನ್ ರಿಸಲ್ಟ್ ಬರುವ ದಿನ ಹತ್ತಿರ ಬಂತು ಅಂತ ಕಾರ್ಯಕರ್ತರು, ಅಭಿಮಾನಿಗಳೆಲ್ಲಾ ಕಾಯುತ್ತಿದ್ದಾರೆ. ಎಲ್ಲಿ ಎಷ್ಟು ಸಿಹಿ ಹಂಚೋದು, ಎಷ್ಟು ಪಟಾಕಿ, ಎಲ್ಲೆಲ್ಲಿ ಮರವಣಿಗೆ ಅಂತೆಲ್ಲಾ ಈಗಾಗ್ಲೇ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ಚುನಾವಣಾ ಆಯೋಗ ಎಲ್ಲಾ ಸೆಲಬ್ರೇಶನ್ಗೂ ಬ್ರೇಕ ಹಾಕಿಬಿಟ್ಟಿದೆ.
ಕೋವಿಡ್ ಆರ್ಭಟದ ನಡುವೆಯೂ ಚುನಾವಣೆ ನಡೆಸಿದ ಆಯೋಗದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮದ್ರಾಸ್ ಹೈಕೋರ್ಟ್ ಕೂಡಾ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಹಾಹಾಕಾರಕ್ಕೆ ಚುನಾವಣಾ ಆಯೋಗವೇ ನೇರ ಹೊಣೆ ಎಂದಿದೆ. ಹಾಗಾಗಿ ಕೆಟ್ಟ ಮೇಲೆ ಬುದ್ಧಿ ಕಲಿತ ಆಯೋಗ ಸಂಭ್ರಮಾಚೆಣೆ ನಿಷೇಧಿಸಿದೆ.
ಮೇ 2ನೇ ತಾರೀಖು 5 ರಾಜ್ಯಗಳ ಮತ ಎಣಿಕೆ ಇದ್ದು ಅಂದು ಗೆಲುವಿನ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಮೆರವಣಿಗೆ ನಡೆಯುವಂತಿಲ್ಲ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ. ದೇಶದೆಲ್ಲೆಡೆ ಕೋವಿಡ್ ಆರ್ಭಟ ಹೆಚ್ಚಿರುವಾಗ ಆಚರಣೆಗಳನ್ನು ಮಾಡದಿರುವುದು ಸೂಕ್ತ ಎಂದು ನಿರ್ಧರಿಸಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆ ಇಷ್ಟು ವ್ಯಾಪಕವಾಗಿ ಹರಡುವುದಕ್ಕೆ ಚುನಾವಣಾ ಆಯೋಗವೇ ಕಾರಣ ಎಂದು ಮಡ್ರಾಸ್ ಹೈಕೋರ್ಟ್ ಆಯೋಗವನ್ನು ತರಾಟೆಗೆ ತೆಗೆದುಕೊಂಡಿತ್ತು. ಆಯೋಗದ ಅಧಿಕಾರಿಗಳನ್ನು ಕೊಲೆಯ ಆರೋಪದ ತಪ್ಪಿಸ್ಥರು ಎಂದರೂ ತಪ್ಪಾಗುವುದಿಲ್ಲ ಎಂದು ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಹೊಸಾ ನಿಷೇಧ ಆದೇಶಿಸಲಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚಿರುವಾಗಲೇ ಬಹುತೇಕ ಒಂದು ತಿಂಗಳಿಡೀ ಚುನಾವಣಾ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ನಡೆದಿದ್ದು ಇದಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ ಆಯೋಗ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಚುನಾವಣಾ ಆಯೋಗ ಕೇಂದ್ರದ ಬಿಜೆಪಿ ಆಡಳಿತಕ್ಕೆ ಸಹಾಯ ಮಾಡಲು 8 ಹಂತಗಳ ಚುನಾವಣೆ ನಡೆಸುತ್ತಿದೆ ಎಂದು ನೇರವಾಗಿ ಆರೋಪಿಸಿತ್ತು. ಕೊನೆಯ ಮೂರು ಹಂತಗಳನ್ನು ಒಟ್ಟಿಗೇ ನಡೆಸಲು ಮನವಿ ಮಾಡಿದ್ರೂ ಆಯೋಗ ಕೇಳಲಿಲ್ಲ ಎಂದು ದೂರಿತ್ತು.
ಪಶ್ಚಿಮ ಬಂಗಾಳ ಅಲ್ಲದೇ ಅಸ್ಸಾಮಿನಲ್ಲಿ 3 ಹಂತಗಳಲ್ಲಿ, ತಮಿಳುನಾಡು, ಪುದುಚೆರಿ ಮತ್ತು ಕೇರಳದಲ್ಲಿ ಒಂದು ಹಂತದ ಮತದಾನ ನಡೆದಿತ್ತು. ಸೋಮವಾರ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಮದ್ರಾಸ್ ಹೈಕೋರ್ಟ್ ಕೋವಿಡ್ 19 ದೇಶದಲ್ಲಿ ಎರಡನೇ ಅಲೆಯ ಕರಾಳ ರೂಪ ಪ್ರದರ್ಶಿಸೋಕೆ ಚುನಾವಣಾ ಆಯೋಗವೇ ಕಾರಣ ಎಂದಿದೆ. ಆಯೋಗದ ಅಧಿಕಾರಿಗಳ ಮೇಲೆ ಬಹುಶಃ ಕೊಲೆಯ ಆರೋಪ ಮಾಡಬೇಕೇನೋ ಎಂದು ಚಾಟಿ ಬೀಸಿದೆ.
ಚುನಾವಣಾ ಆಯೋಗ ಕಳೆದ ವರ್ಷ ಬಿಹಾರದಲ್ಲಿ ನಂತರ 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಚುನಾವಣೆ ನಡೆಸಿದೆ. ಎಲ್ಲಾ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡೇ ಚುನಾವಣೆ ನಡೆಸಲಾಯಿತು ಎಂದು ಆಯೋಗ ಹೇಳಿದರೂ ಕೂಡಾ ಎಲ್ಲೆಡೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಜನ ಗುಂಪುಸೇರಿದ್ದರು. ಚುನಾವಣಾ ಪ್ರಚಾರ ಕಾರ್ಯಗಳ ನಂತರವೇ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕರಲ್ಲಿ ಸೋಂಕು ದೃಢಪಟ್ಟಿತ್ತು.
ಆ ಸಂದರ್ಭದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ಚುನಾವಣೆ ಮುಗಿದ ನಂತರ ಒಂದಕ್ಕೆ ಹತ್ತರಷ್ಟು ಏರಿಕೆ ಕಂಡಿದೆ. ಎಲ್ಲೆಲ್ಲೂ ಹಾಸಿಗೆ, ಆಕ್ಸಿಜನ್, ವೆಂಟಿಲೇರ್, ಐಸಿಯುಗಳಿಗೆ ಹಾಹಾಕಾರ ಎದ್ದಿರುವ ಸಂದರ್ಭ ನಿರ್ಮಾಣವಾಗೋಕೆ ಚುನಾವಣೆಯೇ ಪ್ರಮುಖ ಕಾರಣ ಎನ್ನುವ ಆರೋಪಗಳು ಎಲ್ಲೆಡೆ ಕೇಳಿಬಂದವು.