- News18 Kannada
- Last Updated: April 25, 2021, 9:46 PM IST
ನವದೆಹಲಿ : ಇಡೀ ದೇಶ ಕೊರೋನಾ 2ನೇ ಅಲೆಯಿಂದ ತತ್ತರಿಸಿದೆ. ಆಕ್ಸಿಜನ್ ಕೊರತೆಯ ಭಯಾನಕ ಪರಿಸ್ಥಿತಿ ತಲೆದೂರಿದೆ. ಜನಸಾಮಾನ್ಯರು ಉಸಿರು ಚೆಲ್ಲುವ ಮುನ್ನ ನೆರವಾಗಲು ಸರ್ಕಾರಗಳು, ವೈದ್ಯಕೀಯ ವಲಯ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವಿಶ್ವದ ಹಲವು ರಾಷ್ಟ್ರಗಳು ಆಕ್ಸಿಜನ್ ಪೂರೈಕೆಗೆ ಭಾರತಕ್ಕೆ ಸಹಾಯಹಸ್ತ ಚಾಚಿವೆ. ಇಂಥ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ‘ಉಸಿರಾಗಲು’ ಭಾರತೀಯ ಉದ್ಯಮಿಗಳು ಮುಂದಾಗಿದ್ದಾರೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ದೇಶದ ನೆರವಿಗೆ ಧಾವಿಸಿದೆ. ಭಾರತದ ದೊಡ್ಡ ಉದ್ಯಮಿಗಳು ಇದರ ಸದಸ್ಯರಾಗಿದ್ದು ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೈಜೋಡಿದ್ದಾರೆ.
CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾಟಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪವನ್ ಕಂಡೇಲ್ವಾಲ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ನಮ್ಮ ದೇಶ ಈಗ ಸಂಕಷ್ಟದಲ್ಲಿದೆ. ಹೀಗಾಗಿ ಆಕ್ಸಿಜನ್ ಪೂರೈಕೆಗೆ ನಮ್ಮ ಒಕ್ಕೂಟ ಸರ್ಕಾರದ ಜೊತೆ ಕೈಜೋಡಿಸಲಿದೆ ಎಂದು ತಿಳಿಸಿದ್ದಾರೆ. ರಿಲಯನ್ಸ್ ಸಂಸ್ಥೆ ಮುಖ್ಯಸ್ಥರಾದ ಮುಕೇಶ್ ಅಂಬಾನಿ, ಟಾಟಾ ಗ್ರೂಪ್ನ ರತನ್ ಟಾಟಾ, ನವೀನ್ ಜಿಂದಾಲ್, ಅನಿಲ್ ಅಗರ್ವಾಲ್ ಸೇರಿದಂತೆ ಹಲವು ಉದ್ಯಮಿಗಳು ಒಕ್ಕೂಟದ ಮೂಲಕ ನೆರವು ನೀಡಲಿದ್ದಾರೆ.
CAIT ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾಟಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಪವನ್ ಕಂಡೇಲ್ವಾಲ ಮಾತಾನಾಡಿ, ಈ ಮೂಲಕ ನಾವು ಈ ಮಣ್ಣಿನ ಮಕ್ಕಳು ಎಂಬುವುದನ್ನು ತೋರಿಸಿಕೊಡುತ್ತಿದ್ದೇವೆ. ಸರ್ಕಾರದೊಂದಿಗೆ ಏನೇ ಭಿನ್ನಾಭಿಪ್ರಾಯಗಳಿರಲಿ ದೇಶ ಮೊದಲು. ನಮ್ಮವರನ್ನು ಉಳಿಸಿಕೊಳ್ಳಲು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿದ್ದೇವೆ. ಭಾರತದಿಂದ ಸಾಕಷ್ಟು ಲಾಭ ಪಡೆದಿರುವ ವಿದೇಶಿ ಕಂಪನಿಗಳು, ಉದ್ಯಮಿಗಳು ನೆರವಿಗೆ ಮುಂದಾಗಿಲ್ಲ. ಆದರೆ ನಾವು ಈ ಮಣ್ಣಿನವರು. ಕಷ್ಟದಲ್ಲಿ ನಮ್ಮವರೇ ನಮಗೆ ಆಗುತ್ತಾರೆ ಎಂದು ಈ ಮೂಲಕ ಸಾಬೀತಾಗಲಿದೆ ಎಂದಿದ್ದಾರೆ.
ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಿಎಂ ಕೇರ್ಸ್ನ ಹಣದ ನೆರವಿನಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ಇಂದು ತಿಳಿಸಿದೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಪ್ರಧಾನಮಂತ್ರಿ ಸಚಿವಾಲಯ, "ದೇಶದ ಹಲವು ಸ್ಥಳಗಳಲ್ಲಿ ಆಕ್ಸಿಜನ್ ಕೊರತೆಯ ವರದಿಗಳು ಹೆಚ್ಚಾಗುತ್ತಿರುವ ಕಾರಣ, ಜೀವ ಉಳಿಸುವ ಅನಿಲದ ಲಭ್ಯತೆಯನ್ನು ಹೆಚ್ಚಿಸಲು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೌಲಭ್ಯ ಘಟಕಗಳಲ್ಲಿ 500 ಕ್ಕೂ ಹೆಚ್ಚು ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು" ಎಂದು ಸ್ಪಷ್ಟಪಡಿಸಿದೆ.